ಸಾಕಷ್ಟು ನಿರೀಕ್ಷೆಗಳೊಂದಿಗೆ ತೆರೆಕಂಡಿದ್ದ, ಶಿವರಾಜ್ ಕುಮಾರ್ ಅಭಿನಯದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ.
ನೂರಾರು ಕೋಟಿ ಬೆಲೆಬಾಳುವ ಚಿನ್ನದ ಬಿಸ್ಕೆಟ್ ಗಳ ಸುತ್ತ ನಡೆಯುವ ಕಥೆ ಇದಾಗಿದ್ದು, ಇದಕ್ಕೆ ಪೂರಕವಾಗಿ ಜೈಲ್ ಹೈಜಾಕ್ ಮಾಡೋ ದಳವಾಯಿ ಗ್ಯಾಂಗ್, ಅದನ್ನು ಬ್ರೇಕ್ ಮಾಡಲು ಬರೋ ಸ್ಪೆಷಲ್ ಆಫೀಸರ್, ಒಬ್ಬರಿಗಿಂತ ಒಬ್ಬರು ಚಾಣಾಕ್ಷರಾದ ಇವರಿಬ್ಬರ ನಡುವಿನ ಹಾವು ಏಣಿಯಾಟದಲ್ಲಿ ಯಾರು ಗೆಲ್ತಾರೆ, ಯಾರು ಸೋಲ್ತಾರೆ ಅನ್ನೋದೇ ಘೋಸ್ಟ್ ಚಿತ್ರದ ಹೈಲೈಟ್.
ವಿಶೇಷವಾಗಿ ಈ ಚಿತ್ರದಲ್ಲಿ ನಾಯಕಿ ಪಾತ್ರವಿಲ್ಲ. ಚಿತ್ರ ಆರಂಭವಾಗುವುದೇ ಜೈಲ್ ಆವರಣದಿಂದ. ಅಷ್ಟಕ್ಕೂ ಶಿವಣ್ಣ ಗ್ಯಾಂಗ್ ಯಾಕೆ ಜೈಲನ್ನು ಹೈಜಾಕ್ ಮಾಡಿದ್ರು? ಈ ಹೈಜಾಕ್ ಹಿಂದಿರೋ ಐಡಿಯಾ ಏನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಚಿತ್ರವೇ ಹೇಳುತ್ತ ಹೋಗುತ್ತದೆ.
ಕೇವಲ ೪೮ ಗಂಟೆಗಳಲ್ಲಿ ನಡೆಯುವ ಕಥೆ ಇದಾಗಿದ್ದು, ಚಿತ್ರ ಅಷ್ಟೇ ವೇಗವಾಗಿ ಸಾಗುತ್ತದೆ. ಪಟ ಪಟನೇ ಸಾಗುವ ಸ್ಕ್ರೀನ್ ಪ್ಲೇ ಪ್ರೇಕ್ಷಕರನ್ನು ಎಂಗೇಜಿಂಗ್ ಆಗಿಡುತ್ತದೆ. ಸ್ವಲ್ಪ ಅತ್ತಿತ್ತ ಹೊರಳಿದರೂ ಚಿತ್ರದ ಲಿಂಕ್ ತಪ್ಪಿ ಹೋಗುತ್ತದೆ. ಶ್ರೀನಿ ಅಷ್ಟು ಟೈಟ್ ಸ್ಕ್ರಿಪ್ಟ್ ಮಾಡಿದ್ದಾರೆ. ಏಳೆಂಟು ಖೈದಿಗಳನ್ನು ಬಳಸಿಕೊಂಡು ಜೈಲಿನ ಸಿಬ್ಬಂದಿಗಳನ್ನೇ ಶಿವಣ್ಣ ಹೇಗೆ ಯಾಮಾರಿಸುತ್ತಾರೆ. ಕೊನೆವರೆಗೂ ತಾನ್ಯಾರು, ತನ್ನ ಹಿಂದಿರೋದ್ಯಾರು ಅನ್ನೋದನ್ನು ಆ ಪಾತ್ರ ಬಿಟ್ಟುಕೊಡಲ್ಲ. ಜೈಲ್ ಆಫೀಸರ್ ಆಗಿ ಜಯರಾಮ್ ಪಾತ್ರ ಎಂಟ್ರಿಯಾದ ಮೇಲೆ ಇಬ್ಬರ ನಡುವಿನ ಹಗ್ಗ ಜಗ್ಗಾಟ ಇಂಟರೆಸ್ಟಿಂಗ್ ಅಗಿದೆ. ಜೈಲನ್ನು ಮತ್ತೆ ತಮ್ಮ ಅಧೀನಕ್ಕೆ ಪಡೆಯೋ ಹೊಣೆ ಹೊತ್ತು ಬರುವ ಜಯರಾಮ್ ಹಾಗೂ ಶಿವಣ್ಣ ನಡುವೆ ಹಾವು ಏಣಿ ಆಟ ನಡೆಯುತ್ತೆ. ಆ್ಯಂಗ್ರಿ ಯಂಗ್ ಮ್ಯಾನ್ ಆಗಿರುವ ಶಿವಣ್ಣನ ಗ್ಯಾಂಗ್ಸ್ಟರ್ ಲುಕ್ ಪ್ರೇಕ್ಷಕರಿಗೆ ಕಿಕ್ ಕೊಡುತ್ತೆ.
ಚಿತ್ರದ ಫಸ್ಟ್ ಹಾಫ್ ಕಥೆ ಗೊಂದಲದಲ್ಲೇ ಸಾಗುತ್ತದೆ. ಆದರೆ ನಿರ್ದೇಶಕ ಶ್ರೀನಿ ಸೆಕೆಂಡ್ ಹಾಫ್ ನಲ್ಲಿ ಪ್ರೇಕ್ಷಕರ ಗೊಂದಲಗಳಿಗೆ ಉತ್ತರ ನೀಡುತ್ತಾ ಹೋಗಿದ್ದಾರೆ. ಶಿವರಾಜ್ ಕುಮಾರ್ ಇಲ್ಲಿ ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳನ್ನು ಹೊರತುಪಡಿಸಿ, ಇಲ್ಲಿ ಬೇರೆಯದೇ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕಣ್ಣಲ್ಲೇ ಹೆಚ್ಚು ಮಾತಾಡುವ ಆ ಪಾತ್ರಕ್ಕೆ ಡೈಲಾಗ್ ಕೂಡ ಕಮ್ಮಿ. ಜೊತೆಗೆ ಶಿವಣ್ಣ ಇಲ್ಲಿ ಯಂಗ್ ಸ್ಟರ್ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಆ ಕ್ಯಾರೆಕ್ಟರ್ ಏಕೆ, ಹೇಗೆ ಬರುತ್ತೆ ಅನ್ನೋದನ್ನು ತೆರೆಮೇಲೆ ನೋಡಿದರೇನೇ ಚೆನ್ನ.
ಒಟ್ಟಾರೆ ಇಡೀ ಚಿತ್ರದಲ್ಲಿ ಯಂಗ್ ಸ್ಟರ್ಸ್ ನಾಚುವಂತೆ ಶಿವಣ್ಣ ತೆರೆಯನ್ನು ಆವರಿಸಿಕೊಂಡಿದ್ದಾರೆ. ಇನ್ನು ಕೆ.ಜಿ.ಎಫ್.ಖ್ಯಾತಿಯ ಅರ್ಚನಾ ಜೋಯಿಸ್ ಟಿವಿ ರಿಪೋರ್ಟರ್ ಆಗಿ ಕಾಣಿಸಿಕೊಂಡಿದ್ದರೆ, ಕಥೆಗೆ ಟ್ವಿಸ್ಟ್ ನೀಡುವ ಪಾತ್ರದಲ್ಲಿ ಬಾಲಿವುಡ್ ನಟ ಅನುಪಮ್ ಖೇರ್ ಕ್ಲೈಮ್ಯಾಕ್ಸ್ ನಲ್ಲಿ ಎಂಟ್ರಿ ಕೊಡುತ್ತಾರೆ.
ಜೊತೆಗೆ ಅರ್ಜುನ್ ಜನ್ಯಾ ಅವರ ಹಿನ್ನೆಲೆ ಸಂಗೀತ ಚಿತ್ರದಲ್ಲಿ ತುಂಬಾ ಮುಖ್ಯ ಪಾತ್ರ ವಹಿಸುತ್ತದೆ. ಅದೇ ಚಿತ್ರದ ಮತ್ತೊಬ್ಬ ಹೀರೋ ಎನ್ನಬಹುದು. ಕಥೆಯ ಮುಖ್ಯ ಘಟ್ಟಗಳಲ್ಲಿ ಪ್ರೇಕ್ಷಕರಿಗೆ ಒಂದೊಳ್ಳೆ ಅನುಭವ ಕೊಡುತ್ತದೆ. ಜೊತೆಗೆ ಮಹೇನ್ ಸಿಂಹ ಅವರ ಕ್ಯಾಮೆರಾ ವರ್ಕ್ ನೋಡುಗನಿಗೆ ಹೊಸ ಅನುಭವ ನೀಡುತ್ತದೆ.